ಅನುಭೂತಿ ಉಸಿರು ಸಿಕ್ಕಿಕೊಂಡು
ಎದೆಗೂಡಲ್ಲಿ ನರಳುತ್ತಿದೆ.
ಜೀವ ಸಾಯುತ್ತ ಸಾಯುತ್ತಾ
ಬದುಕುವ ಕಾತರದಲ್ಲಿದೆ.
ನಾಲ್ಕು ದಿಕ್ಕುಗಳ ಮಧ್ಯೆ ನಿಂತ
ಅನಾಥ ಮನ ತನ್ನ ದಾರಿ ಅರಸುವ ವೇಳೆ,
ಜಗತ್ತಲ್ಲಿ ಅವರವರದ್ದು ಅವರವರಿಗೆ...
ಎಲ್ಲ ಮಾತು ಬಲ್ಲವರೇ...ಮೌನಕ್ಕಿಲ್ಲಿ......?
ವಾತ್ಸಲ್ಯ , ಪ್ರೇಮ, ವಿಶ್ವಾಸ ಹೀಗೆ...
ಎಲ್ಲವೂ ಕೊಡುವ ಬಿರುದು, ಸನ್ಮಾನಗಳ
ಮೂಟೆಯ ಭಾರ ಹೆಗಲೇರುತ್ತಿದೆ.
ಕಳಚಿಟ್ಟು ನಡೆಯುವಂತಿಲ್ಲ...
ಹರಿದು ಹಂಚಿಹೋಗಲು ಮೊದಲೇ
ಅನಾಥ ಇನ್ನೊಂದಿಷ್ಟು ಅನಾಥವಾದರೆ...?
ಎಲ್ಲವನ್ನು ಒಪ್ಪಲು, ಅಪ್ಪಲು,
ನಾ ಭೂಮಿಯಾಗಬಾರದಾ...
ಭೂಮಿಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ.
ಮುಗಿಯದ್ದೂ ಕೂಡ ಎಲ್ಲೋ ಒಂದೆಡೆ
ಮುಗಿಯಬಹುದೇನೋ..
ಶನಿವಾರ, ಏಪ್ರಿಲ್ 17, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)